ಟ್ರೇಲರ್ ನಲ್ಲೆ ಕುತೂಹಲ ಮೂಡಿಸಿದ “ಕೇಸ್ ಆಫ್ ಕೊಂಡಾಣ”


ವಿಜಯ್ ರಾಘವೇಂದ್ರ, ಭಾವನ ಮೆನನ್ ಹಾಗೂ ದಿಯಾ ಖ್ಯಾತಿಯ ಖುಷಿ ರವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಕೇಸ್ ಆಫ್ ಕೊಂಡಾಣ” ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ವಿಭಿನ್ನ ಪಾತ್ರಗಳ ಮತ್ತು ಕಥೆಗಳ ಮೂಲಕ ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ರವರು ನಟಿಸಿರುವ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ “ಕೇಸ್ ಆಫ್ ಕೊಂಡಾಣ”. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಭಾರಿ ಕುತೂಹಲ ಮೂಡಿಸಿದೆ. ಉತ್ತಮ ಪ್ರತಿಕ್ರಿಯೆ ದೊರಕಿರುವ ಈ ಟ್ರೇಲರ್‌ನಲ್ಲಿ ಪ್ರತೀ ದೃಶ್ಯವು ಹೊಸತನದಿಂದ ಕೂಡಿದ್ದು ಇದೊಂದು ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಪಟ್ಟಿಗೆ ಸೇರುವ ಎಲ್ಲಾ ಲಕ್ಷಣಗಳು ಇವೆ. ಚಿತ್ರದಲ್ಲಿ ವಿಜಯ ರಾಘವೇಂದ್ರ ಹಾಗೂ ಭಾವನಾ ಮೆನನ್ ರವರು ಪೋಲೀಸ್ ಪಾತ್ರದಲ್ಲಿ ಇದ್ದು ಕೊಂಡಾಣ ಎಂಬ ಪ್ರದೇಶದಲ್ಲಿ ನಡೆಯುವ ಕೊಲೆಯ ಪ್ರಕರಣಗಳನ್ನು ಭೇದಿಸುವ ಕಥೆಯನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನಗಳು ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಈ ಚಿತ್ರ ಭರವಸೆ ಮೂಡಿಸಿದೆ.

ಈ ಹಿಂದೆ ವಿಜಯ ರಾಘವೇಂದ್ರ ಜೊತೆ “ಸೀತಾರಾಮ್ ಬಿನೋಯ್” ಚಿತ್ರ ನಿರ್ದೇಶಸಿದ್ದ ದೇವಿ ಪ್ರಸಾದ್ ಶೆಟ್ಟಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. “ಸೀತಾರಾಮ್ ಬಿನೋಯ್” ಬಿಡುಗಡೆಯಾಗಿ ಉತ್ತಮ ವಿಮರ್ಶೆಯನ್ನು ಪಡೆದಿತ್ತು. ಈಗ ಮತ್ತದೇ ಜೋಡಿ ತೆರೆ ಮೇಲೆ ಬರಲು ಸಿದ್ದರಾಗಿದ್ದಾರೆ.

ವಿಜಯ ರಾಘವೇಂದ್ರ, ಭಾವನಾ ಮೆನನ್, ಖುಷಿ ರವಿ, ಪೆಟ್ರೋಲ್ ಪ್ರಸನ್ನ, ರಂಗಾಯಣ ರಘು ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ವಿಶ್ವಜಿತ್ ರಾವ್ ರವರ ಛಾಯಾಗ್ರಹಣವಿದೆ. ಗಗನ್ ಬಡೇರಿಯ ಸಂಗೀತ ಸಂಯೋಜನೆ ಮಾಡಿದ್ದಾರೆ. ದೇವಿ ಶೆಟ್ಟಿ ಪ್ರಸಾದ್ ಹಾಗೂ ಸ್ವಸ್ತಿಕ್ ಹೆಬ್ಬಾರ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದೆ. ಇದೇ ಜನವರಿ 26 2024 ರ ಗಣರಾಜ್ಯೋತ್ಸವದಂದು ಚಿತ್ರ ಬಿಡುಗಡೆಯಾಗಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.